ನೀನು ನಾನು ಈ ಸಂಕಲನದ ಶಿರ್ಷಿಕೆಯೇ ಒಂದು ವಿಶಿಷ್ಠ ವಾದುದು ಅತ್ಯಂತ ಸರಳವಾದರೂ ಗಹನ ಚಿಂತನೆಗೆ ಆಯಾಮ ಒದಗಿಸುವದು. ಬೇಧಗಳು ಅಬೇಧವಾಗುವಿಕೆ, ಒಂದಾಗುವಿಕೆ, ಜತೆಯಾಗಿ ಬದುಕೋಣ.... ಹೀಗೆ ಅರ್ಥವಂತಿಕೆಗಳಿವೆ. ಈ ಹೆಸರೇ ಒಂದು ವಿನಯದ ಸಂಕೇತ. ಇದೊಂದು ಪ್ರಯೋಗ ಶೀಲ ಕಥೆಗಳಾಗಬಹುದಾದ ಕವನ ಸಂಕಲನ. ಕಾವ್ಯದ ಬಗೆಗೆ ಅನೇಕರು ಅನೇಕ ತರಹ ವ್ಯಾಖ್ಯಾನ ಮಾಡಿದ್ದಾರೆ. ಕನ್ನಡ ಕಾವ್ಯದ ಇತಿಹಾಸ, ನಾನು ಓದಿದಂತೆ ಮೊದಲು ಜಾನಪದ ಗರತಿಯರ ಬದುಕಿನ ಹಾಡು ಪಾಡು, ತ್ರಿಪದಿ,ಅತ್ಯಂತ ಸರಳ ಕನ್ನಡದ ಸಹಜ ಸ್ಪೂರ್ತಿಯು ಸಾಂದರ್ಭಿಕ ಗೀತೆಗಳು, ಗೇಯತೆ, ಲಯ ಮುಂತಾದ ವಿಶ್ವ ಕಾವ್ಯದ ಅಲಂಕಾರಿಕ ಲಕ್ಷಣ ಸಹಿತ ಆಗಿನಿಂದ ಈ ವರೆಗೆ ಪ್ರವಾಹ ತನ್ನ ಪಾತಳಿ ಬದಲಾಗಿಸುತ್ತ ಸಾಗುತಿದೆ. ಈ ಬದಲಾದ ಹರಿವಿಗೆ "ನೀನು-ನಾನು" ಸಂಕಲನ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಎಲ್ಲರೂ ಸಮಾನ ಪ್ರತಿಭಾವಂತರಿಲ್ಲದಿರಬಹುದು, ಆದರೆ ಅವಕಾಶಗಳಂತೂ ಸಮಾನವಾಗಿವೆ. ಆ ಅವಕಾಶದ ಪ್ರತಿಭೆ ಈ ಕವಯಿತ್ರಿ ರೂಪಕಲಾರವರು. ಸಂಕಷ್ಟ , ಹಳವಂಡಗಳ ಕುಲುಮೆಯಲ್ಲಿ ಬೆಂದವರು. ಹುಟ್ಟಿನಿಂದಲೂ ಅಸ್ತಿತ್ವ, ವ್ಯಕ್ತಿತ್ವ ಕಾಪಾಡಿಕೊಳ್ಳಲು ಹೋರಾಟ ಮಾಡುತ್ತಲೇ ಬಂದವರು. ತಾನು ನಡೆದು ಬಂದ ಬದುಕಿನುದ್ದದ ಕಷ್ಟಗಳ ಅನುಭವದ ಕೋಶ ದೊಳಗೆ ಸಾಂದ್ರವಾದ ತುಡಿತ, ತನ್ನದೇ ಭಾವ, ತನ್ನ ಇತಿ ಮಿತಿ, ಕ್ಷಮತೆಗೆ ದಕ್ಕಿದ ಅಕ್ಷರಾಭಿವ್ಯಕ್ತಿಯ ಮೂಲಕ ಕವನವಾಗಿರಿಸಿದ್ದಾರೆ. ಬಹಳಷ್ಟು ಕವನಗಳು ಎದೆಯಾಳದಲ್ಲಿ ಇಳಿದು ವಿವಿಧ ಭಾವಗಳಾಗಿ ತಟ್ಟುವದಂತೂ ಖಂಡಿತ. ಮಹಿಳೆಯರ ತಲ್ಲಣಗಳ, ಅವಳ ಮೇಲಾಗುವ ದಬ್ಬಾಳಿಕೆಗೆಗಳ ವಿರುದ್ಧದ ದನಿ ಎತ್ತುವ ಮಹಿಳಾಪರ ಕಾಳಜಿಯ ಪ್ರಾತಿನಿಧಿಕ ಸಂಕಲನವೂ ಹೌದು.
Comment (1)
Post Comment
Report Abuse
ರೂಪಕಲಾ ಕೆ ಎಮ್ commented on July 7th, 2023 at 11:59 AM
ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಪ್ರಕಾಶನವು ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತ ಬಂದಿರುವುದು ಸಂತೋಷ, ಹೆಮ್ಮೆಯ ವಿಷಯ. ಹಾಗೆಯೇ ನನ್ನ ಚೊಚ್ಚಲ ಕವನ ಸಂಕಲನ " ನೀನು ನಾನು" ಕೃತಿಯ ಕುರಿತಾಗಿ ಬರೆದ ವಿದ್ಯಾಧರ ಮುತಾಲಿಕ ದೇಸಾಯಿ ಗುರುಗಳ ಆಶೀರ್ವಾದದ ಜೊತೆ ಪ್ರಕಟಿಸಿ ಪ್ರೋತ್ಸಾಹ ನೀಡಿದ ಪ್ರದೀಪ್ ಕುಮಾರ್ ಸರ್ ರವರಿಗೂ ಚಿರ ಋಣಿ, ನಿಮ್ಮ ಪ್ರೋತ್ಸಾಹ ಸದಾ ಇರಲಿ. ಇನ್ನಷ್ಟು ಯುವ ಬರಹಗಾರರು ಬೆಳಕಿಗೆ ಬರುವಂತಾಗಲಿ ಎಂದು ಪ್ರಾರ್ಥನೆಯೊಂದಿಗೆ ಹೃತ್ಪೂರ್ವಕ ಧನ್ಯವಾದಗಳು ಸರ್